ಸ್ವಪಕ್ಷೀಯರನ್ನು ಕಡೆಗಣಿಸುತ್ತಿರುವ ಜಾರಕಿಹೊಳಿ ಸಹೋದರರು | Azad Times

1 month ago 2
Google News-KN Google News-EN Telegram Facebook

Azad Times News Desk.

ಚುನಾವಣೆಯ ಹೊಸ್ತಿಲಲ್ಲಿ ಅಸಮಾಧಾನದ ಹೊಗೆ

ಮೂಡಲಗಿ: ಅರಭಾವಿ ಹಾಗೂ ಗೋಕಾಕ ಕ್ಷೇತ್ರಗಳಲ್ಲಿ ಜಾರಕಿಹೊಳಿ ಸಹೋದರರು ಮೂಡಿಸಿದ ರಾಜಕೀಯದ ಛಾಪು ಜೋರಾಗೇ ಇದ್ದರೂ ತಮ್ಮದೇ ಪಕ್ಷದ ನಾಯಕರನ್ನು ಈ ಸಹೋದರರು ಸಮಾರಂಭಗಳಲ್ಲಿ ಉಪೇಕ್ಷೆ ಮಾಡಿ, ನಿರ್ಲಕ್ಷ್ಯ ಮಾಡಿ ಅವಮಾನ ಮಾಡುತ್ತಿದ್ದಾರೆ ಎಂಬ ಅಸಮಾಧಾನದ ಹೊಗೆ ಎರಡೂ ಕ್ಷೇತ್ರಗಳಲ್ಲಿ ಹರಿದಾಡುತ್ತಿದ್ದು ಇದು ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆಯೆಂಬುದು ಲೆಕ್ಕಕ್ಕೆ ಸಿಗದಂತಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಸಂಸದೆ ಶ್ರೀಮತಿ ಮಂಗಳಾ ಅಂಗಡಿಯವರಂತೆಯೇ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿಯವರೂ ಅಷ್ಟೇ ಪ್ರಮುಖರಾಗಿ ನಿಲ್ಲುತ್ತಾರೆ. ಆದರೆ ಮಂಗಳವಾರದ ಗೋಕಾಕದ ಕಾರ್ಯಕ್ರಮದಲ್ಲಿ ಈರಣ್ಣ ಕಡಾಡಿಯವರಿಗೆ ಪ್ರಾಮುಖ್ಯತೆ ಕೊಡದೇ ಇರುವುದು ಜಾರಕಿಹೊಳಿಯವರು ಉದ್ದೇಶಪೂರ್ವಕವಾಗಿಯೇ ಇವರನ್ನು ಕಡೆಗಣಿಸಿ ಅವಮಾನ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 

ಅದರಲ್ಲೂ ಪಂಚಮಸಾಲಿ ವಲಯದಲ್ಲಿ ಈ ಮೊದಲೇ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕುರಿತಂತೆ ಅಸಮಾಧಾನ ಇತ್ತು, ಈಗಲೂ ಇದೆ. ಇದನ್ನು ಪಂಚಮಸಾಲಿ ನಾಯಕರುಗಳೇ ಹೊರಹಾಕಿದ್ದಾರೆ. ಯಾಕೆಂದರೆ, ಪಂಚಮಸಾಲಿಗಳು ೨ಎ ಮೀಸಲಾತಿಗಾಗಿ ಹೋರಾಟ ಮಾಡುವಾಗ ಅವರಿಗೆ ತಮ್ಮ ಬೆಂಬಲ ಇದೆಯೆಂಬ ಒಂದೇ ಒಂದು ಮಾತು ಶಾಸಕರ ಬಾಯಿಂದ ಬರಲಿಲ್ಲ ಎಂದು ಈ ನಾಯಕರು ಹೇಳಿಕೊಂಡು ಬಂದಿದ್ದಾರೆ. ಸರ್ಕಾರ ಮೀಸಲಾತಿ ಕೊಡಲಿ ಬಿಡಲಿ, ಅದು ಬೇರೆ ಮಾತು. ಆದರೆ ಈ ಇಬ್ಬರೂ ಶಾಸಕರು ಕನಿಷ್ಠ ಬೆಂಬಲವನ್ನೂ ತಮ್ಮ ಸಮುದಾಯಕ್ಕೆ ನೀಡಲಿಲ್ಲ ಎಂಬ ಆಕ್ರೋಶ ಪಂಚಮಸಾಲಿಗಳಲ್ಲಿ ಮನೆ ಮಾಡಿದೆ ಎಂದರೆ ತಪ್ಪಾಗಲಾರದು.

ಇದಕ್ಕೆ ಮತ್ತಷ್ಟು ಕುಮ್ಮಕ್ಕು ಕೊಡುವಂತೆ ಗೋಕಾಕದ ಕಾರ್ಯಕ್ರಮದಲ್ಲಿ ಲಿಂಗಾಯತ ಮುಖಂಡ ಸಂಸದ ಕಡಾಡಿಯವರನ್ನು ಕಡೆಗಣಿಸಲಾಗಿದೆ. ಅಲ್ಲದೆ ಮೊನ್ನೆ ಮೂಡಲಗಿ ನಗರದಲ್ಲಿ ನಡೆದ ಬೇಡ ಜಂಗಮ ಸಮಾವೇಶದಲ್ಲಿಯೂ ಭಾಗವಹಿಸದೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಮ್ಮ ಸಮುದಾಯದ ಬಗ್ಗೆ ಅಸಡ್ಡೆ ತೋರಿದರು ಎಂಬ ಅಸಮಾಧಾನವಿದೆ ( ಈರಣ್ಣ ಕಡಾಡಿಯವರನ್ನೂ ಸಮಾವೇಶಕ್ಕೆ ಆಹ್ವಾನಿಸಿದ್ದಕ್ಕೆ ಶಾಸಕರು ಬರಲಿಲ್ಲ ಎಂಬ ಮಾತು ಅಲ್ಲಿ ಹರಿದಾಡಿತು) 

ಮೊದಲೇ ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರುಗಳು ಕೂಡ ಶಾಸಕರ ಮೇಲೆ ಸಮುದಾಯಗಳಿಗೆ ಅವಮಾನ ಮಾಡಿರುವ ಆಪಾದನೆ ಮಾಡಿದ್ದಾರೆ. ಒಂದು ಪತ್ರಿಕಾಗೋಷ್ಠಿಯಲ್ಲಿ ಅರವಿಂದ ದಳವಾಯಿ, ಲಕ್ಕಣ್ಣ ಸವಸುದ್ದಿಯವರು ಹಾಗೂ ಗುರು ಗಂಗಣ್ಣವರ ಮಾತನಾಡುತ್ತ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮದ ಬ್ಯಾನರ್ಗಳನ್ನು ಹರಿದ ಬಿಜೆಪಿ ಕಾರ್ಯಕರ್ತರು ಹಾಲುಮತ ಸಮಾಜ, ಉಪ್ಪಾರ ಸಮಾಜ ಹಾಗೂ ಲಿಂಗಾಯತ ಸಮಾಜಗಳ ನಾಯಕರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಬಹುಸಂಖ್ಯಾತ ಈ ಸಮುದಾಯದ ಜನರು ಈ ಕ್ಷೇತ್ರದಲ್ಲಿ ಇದಕ್ಕೆ ಯಾವ ರೀತಿ ಸ್ಪಂದಿಸುತ್ತಾರೋ ಕಾದು ನೋಡಬೇಕು.

ರಾಜ್ಯದಲ್ಲಿ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ಎಲ್ಲ ಸಮಯದಾಯಗಳು ತಮ್ಮ ಪ್ರಾಶಸ್ತ್ಯ ವ್ಯಕ್ತಪಡಿಸಲು ಹಾಗೂ ತಮಗಾಗಿ ಇರುವ ಸೌಲಭ್ಯಗಳ ಬೇಡಿಕೆಯನ್ನು ಮಂಡಿಸುವುದು ಸಹಜವಾದದ್ದು. ಎಲ್ಲವನ್ನೂ ತೂಕವಾಗಿ ಮುನ್ನಡೆಸಿಕೊಂಡು ಹೋಗಬೇಕಾದದ್ದು ರಾಜಕಾರಣಿಗಳ ಕರ್ತವ್ಯ.

ಕ್ಷೇತ್ರದಲ್ಲಿ ತಮಗಷ್ಟೇ ಪ್ರಾಮುಖ್ಯತೆ ಸಿಗಬೇಕು ಎಂಬ ಧೋರಣೆಯಿಂದ ಸ್ವಪಕ್ಷೀಯರನ್ನೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆಪಾದನೆ ಜಾರಕಿಹೊಳಿ ಸಹೋದರರ ಮೇಲೆ ಇದೆ ಇದಕ್ಕೆ ಇವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಹಾಗೂ ಚುನಾವಣೆಯಲ್ಲಿ ಯಾವ ದಾಳಗಳನ್ನು ಉರುಳಿಸಿ ಆಯ್ಕೆಯಾಗಿ ಬರುತ್ತಾರೆ ಎಂಬುದು ಅವರ ಚಾಣಾಕ್ಷತೆಗೆ ಸಂಬಂಧಿಸಿದ್ದಾಗಿದೆ.


ಉಮೇಶ ಬೆಳಕೂಡ, ಮೂಡಲಗಿ

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page